Tuesday, December 25, 2012

Lady Minus Macbeth

Lady Minus Macbeth ನನ್ನ ಮ್ಯಾಕ್ಬೆತ್  ಅನುವಾದದ ಒಂದು ಹೊಸ ರಂಗಪ್ರಯೋಗ. ಇದರ ನಿರ್ದೇಶಕರು ಚಿದಂಬರ ರಾವ್ ಜಂಬೆ. ಆಡಿದವರು ಬೆಂಗಳೂರಿನ ಕ್ರಿಯೇಟಿವ್ ಕಲಾವಿದರು. ಸೋಲೋ ನಟನೆಯಾದ ಇದರ ನಟಿ ಲಕ್ಷ್ಮಿ ಚಂದ್ರಶೇಖರ್. ಅಕ್ಟೋಬರ್ ನಲ್ಲಿ ರಂಗಶಂಕರದಲ್ಲಿ ನಡೆದ ಶೇಕ್ ಸ್ಪಿಯರ್ ಫೆಸ್ಟಿವಲ್ ನಲ್ಲಿ ಇದನ್ನು ಮೊದಲು ಆಡಿದ್ದರು. ನನಗೆ ಆಗ ನೋಡಲಾಗಲಿಲ್ಲ. ಮೊನ್ನೆ ಡಿಸೆಂಬರ್ 13ರಂದು ರಿಪೀಟ್ ಶೋ ಇತ್ತು. ಹೀಗಾಗಿ ನೋಡುವುದು ಸಾಧ್ಯವಾಯಿತು.

ಇದನ್ನು ನೋಡುವ ವರೆಗೆ ಹೀಗೆ ಮ್ಯಾಕ್ಬೆತ್ ನಂಥಾ ಇಡೀ ದೇಶದ ಪರಿಸ್ಥಿತಿಯನ್ನು ತೋರಿಸುವ ನಾಟಕವನ್ನು ಒಂದೇ ವ್ಯಕ್ತಿಯ ಮೇಲೆ ಕೇಂದ್ರೀಕರಿಸಿ ಆಡಲು ಸಾಧ್ಯ ಎನ್ನುವ ಕಲ್ಪನೆಯೇ ಇರಲಿಲ್ಲ. ಹಾಗೆ ಆಡಿದ್ದರಿಂದ ಲೇಡಿ ಮ್ಯಾಕ್ಬೆತ್ ಳ ಒಂಟಿತನದ ಮೇಲೆ ಗಮನ ಕೇಂದ್ರೀಕರಿಸಿ ತೋರಿಸುವುದು ಲಕ್ಷ್ಮಿ ಅವರಿಗೆ ಸಾಧ್ಯವಾಗಿದೆ. ನಾಟಕವನ್ನು ತಮ್ಮ ಉದ್ದೇಶಕ್ಕೆ ಹೊಂದುವಂತೆ ಎಷ್ಟು ಚೆನ್ನಾಗಿ ಎಡಿಟ್ ಮಾಡಿಕೊಂಡಿದ್ದಾರೆಂದರೆ, ನನಗೆ ಮ್ಯಾಕ್ಬೆತ್ ನಾಟಕವನ್ನು ಹೊಸತೇ ಆಗಿ ನೋಡುತ್ತಿರುವಂತೆ ಅನ್ನಿಸಿತು. ಜೊತೆಗಿದ್ದ ಗೆಳೆಯರು ಹೇಳಿದಂತೆ, ಇದು ಯಾವುದೇ ಅಂತರರಾಷ್ಟೀಯ ಗುಣಮಟ್ಟದ ನಾಟಕಕ್ಕೆ ಕಮ್ಮಿ ಇರಲಿಲ್ಲ. ಅತ್ಯುತ್ತಮ ನಟಿಯರಾದ ಲಕ್ಷ್ಮಿ, ಅಷ್ಟೇ ಪ್ರತಿಭಾವಂತರಾದ ಚಿದಂಬರ ಜಂಬೆ-- ಇಬ್ಬರ ಗಣನೀಯ ಸಾಧನೆ ಇದು. ಇದನ್ನು ಮ್ಯಾಕ್ಬೆತ್  ನಾಟಕದ ಫೆಮಿನಿಸ್ಟ್ ಪ್ರಯೋಗ ಎಂದೂ ಕರೆಯಬಹುದು.

ಮತ್ತೆ ಪ್ರಯೋಗ ಆದರೆ ನನಗೇ ಇದನ್ನು ಇನ್ನೊಮ್ಮೆ ನೋಡಬೇಕು ಅನ್ನಿಸಿತು. 

Tuesday, November 27, 2012

ಇವು ಬೋಧಿ ಟ್ರಸ್ಟ್ ನಿಂದ ಈಗ ಮಾರಾಟಕ್ಕೆ ಲಭ್ಯವಿರುವ ಪುಸ್ತಕಗಳು. ನಮ್ಮ ಪುಸ್ತಕಗಳು ಪುಸ್ತಕದ ಅಂಗಡಿಗಳಲ್ಲಿ ಸಿಕ್ಕಲಾರವು. ಹೀಗಾಗಿ ಅವು ಬೇಕಾದವರು ನೇರವಾಗಿ ನಮಗೆ ಬರೆದು ತರಿಸಿಕೊಳ್ಳಿ. ಹೀಗೆ ನೇರವಾಗಿ ನಮ್ಮಿಂದ ತರಿಸಿಕೊಳ್ಳುವವರಿಗೆ 25% ರಿಯಾಯಿತಿಯಿದೆ. ಹಣವನ್ನು ಬೋಧಿ ಟ್ರಸ್ಟ್ ಹೆಸರಿಗೆ ಚೆಕ್, ಡಿ. ಡಿ. ಮೂಲಕ ಕಳಿಸಬಹುದು. ಅಥವಾ ಬೋಧಿ ಟ್ರಸ್ಟ್, ಎಸ್. ಬಿ. ಅಕೌಂಟ್ ನಂ. 1600101008058, ಕೆನರಾ ಬ್ಯಾಂಕ್, ಎಣ್ಮೂರು (Yenmur) 574328, ಕರ್ನಾಟಕ, IFSC: CNRB0001600 --ಇಲ್ಲಿಗೆ ಜಮೆ ಮಾಡಿ ವಿಳಾಸ ತಿಳಿಸಿದರೆ ಪುಸ್ತಕ ಕಳಿಸುತ್ತೇವೆ. ಪುಸ್ತಕ ಮೊದಲು ತರಿಸಿಕೊಂಡು ಆ ಮೇಲೂ ಹಣ ಕೊಡಬಹುದು.

ಇದು ಲಭ್ಯವಿರುವ ನಮ್ಮ ಪುಸ್ತಕಗಳು:

1. ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಪರಿಷ್ಕೃತ ವಿಸ್ತ್ರತ ಆವೃತ್ತಿ.  2012. ಬೆಲೆ ರೂ150.00
2. ಸಮಗ್ರ ಕಥೆಗಳು. ಸಂಪುಟ 1 (ಕೆಲವು ಅಪ್ರಕಟಿತ ಕಥೆಗಳೂ ಸೇರಿ.) 2012. ರೂ150.00
3. ಸಮಗ್ರ ನಾಟಕಗಳು. ಸಂಪುಟ1  2012. ರೂ120.00
4. ಸಮಗ್ರ ನಾಟಕಗಳು ಸಂಪುಟ 2. 2011 ರೂ60.00
5. ಸಮಗ್ರ ನಾಟಕಗಳು ಸಂಪುಟ 3. 2011 ರೂ75.00
6. ಸಮಗ್ರ ನಾಟಕಗಳು ಸಂಪುಟ 4. 2011 ರೂ75.00
7. ಐದು ಕವನಗಳು. 2011                     ರೂ50.00
8. ಹ್ಯಾಮ್ಲೆಟ್ . ಅನುವಾದ.                     ರೂ50.00
9. ಮುಚ್ಚು ಮತ್ತು ಇತರ ಲೇಖನಗಳು.       ರೂ60.00

ಎಲ್ಲಾ ಪುಸ್ತಕಗಳ ಲೇಖಕ: ರಾಮಚಂದ್ರ ದೇವ



Monday, October 29, 2012

ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ

ಇದು ಈಗ ಪ್ರಕಟವಾಗಿರುವ ನನ್ನ ಹೊಸ ಪುಸ್ತಕ. ಇದರ ಮೊದಲ ಆವೃತ್ತಿ 1993ರಲ್ಲಿ ಪ್ರಕಟವಾಗಿತ್ತು. ಪ್ರಕಟವಾದ ಆರೇ ತಿಂಗಳಲ್ಲಿ ಪ್ರತಿಗಳು ಮುಗಿದಿದ್ದವು. ಇದು ವಿಸ್ತೃತ ಪರಿಷ್ಕೃತ ಆವೃತ್ತಿ. ಇದರಲ್ಲಿ ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಮಾತ್ರವಲ್ಲದೆ ಶೇಕ್ ಸ್ಪಿಯರ್ ಕುರಿತು ನಾನು ಇದು ವರೆಗೆ ಬರೆದ ಎಲ್ಲಾ ಬರೆಹಗಳಿವೆ. ಶೇಕ್ ಸ್ಪಿಯರ್ ನಾಟಕ, ಸಾನೆಟ್, ಹಾಗೂ ಅವನ ಅಧ್ಯಯನ ಕ್ರಮಗಳ ಕುರಿತು ಲೇಖನಗಳಿವೆ; ಅಲ್ಲದೆ ಅವನ ಹತ್ತು ಸಾನೆಟ್ಟುಗಳ ಅನುವಾದಗಳಿವೆ. ಅವನ ಜೀವನ ಕುರಿತ ಟಿಪ್ಪಣಿಯಿದೆ.

ಈ ಪುಸ್ತಕ ಪ್ರಕಟವಾದಾಗ ಇದು ಅನೇಕ ಬಲ್ಲವರ ಹೊಗಳಿಕೆಗೆ ಪಾತ್ರವಾಗಿತ್ತು. ಯು. ಆರ್. ಅನಂತಮೂರ್ತಿ "ಈ ಬಗೆಯ ಕೃತಿ ಕನ್ನಡದಲ್ಲಾಗಲೀ ಇಂಗ್ಲಿಷಿನಲ್ಲಾಗಲೀ ಇದು ವರೆಗೆ ಪ್ರಕಟವಾಗಿಲ್ಲ,  ಮತ್ತು ಇದು ತೌಲನಿಕ ವಿಮರ್ಶೆಗೆ ಹೊಸ ಕೊಡುಗೆಯಾಗಿದೆ" ಎಂದು ಹೊಗಳಿದ್ದರು. ಇವರಲ್ಲದೆ ಹಾ. ಮಾ. ನಾಯಕ, ಜನಾರ್ದನ ಭಟ್, ಕೆ. ಸತ್ಯನಾರಾಯಣ ಮೊದಲಾದ ಬಹುಶ್ರುತರು ಇದರ ಬಗ್ಗೆ ಬರೆದಿದ್ದರು. ವೈಯಕ್ತಿಕವಾಗಿ ಮೆಚ್ಚಿದವರು, ಇದನ್ನೊಂದು ಮೋಡೆಲ್ ಥೀಸಿಸ್ ಎಂದು ಪರಿಗಣಿಸಿದವರು ಅನೇಕರು.

ಅನಂತಮೂರ್ತಿಯವರ ಬರೆವಣಿಗೆಯನ್ನು ಬ್ಲರ್ಬ್ ಆಗಿ ಹಾಕಿದ್ದೇನೆ. ಆಸಕ್ತರು ಮೇಲಿನ ಚಿತ್ರವನ್ನು ದೊಡ್ಡದು ಮಾಡಿ ಅದನ್ನು ಓದಬಹುದು.

ಪುಟಗಳು: 192. ಬೆಲೆ: ರೂ150.00.
ಪ್ರಕಾಶಕರು: ಬೋಧಿ ಟ್ರಸ್ಟ್,
ಅಂಚೆ ಕಲ್ಮಡ್ಕ 574212,
ಬೆಳ್ಳಾರೆ, ಕರ್ನಾಟಕ.
ಪ್ರತಿ ಬೇಕಾದವರು ನೇರ ನಮಗೆ ಬರೆದು ತರಿಸಿಕೊಳ್ಳಬಹುದು. ಅಥವಾ
Bodhi Trust,
Canara Bank, SB Account 1600101008058,
Yenmur 574328, Sullia Tq.
IFSC: CNRB0001600
--ಇಲ್ಲಿಗೆ ಹಣ ಜಮೆ ಮಾಡಿ ನಮಗೆ ಅಂಚೆ ವಿಳಾಸ ತಿಳಿಸಿದರೆ ಪುಸ್ತಕ ಬುಕ್ ಪೋಸ್ಟಿನಲ್ಲಿ ಕಳಿಸುತ್ತೇವೆ.
ಡಿಸ್ಕೌಂಟ್: 25%.
ಕೋರಿಯರಿನಲ್ಲಿ ಬೇಕಾದವರು ರೂ.30/-- ಜಾಸ್ತಿ ಕಳಿಸಿರಿ.

Friday, October 5, 2012

ಪುರಂದರ ದಾಸರ ದಿನೇಶ್ ಹಾಸನ್ ಅನುವಾದ


ಎಚ್. ಎಸ್. ದಿನೇಶ್ ಕುಮಾರ್ ಅಂದರೆ 1970ರ ದಶಕದ ಮೊದಲ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಧ್ಯಾಪಕರಾಗಿದ್ದವರಿಗೆ ನೆನಪಿರಬಹುದು. ಆಗ 1971ರಿಂದ 1973ರ ವರೆಗೆ ಅವರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. 1966ರಿಂದ 1969ರ ವರೆಗೆ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಆನರ್ಸ್ ಮಾಡಿ ಮುಂದೆ ಎರಡು ವರ್ಷ ಮೈಸೂರಿನಲ್ಲಿ ಎಂ. ಎ. ಮಾಡಿದರು. ಆಗ ನಾನು, ಅವರು, ದೇವರಾಜು-ಶಾಂತಿ ದಂಪತಿ, ಶಂಕರನಾರಾಯಣ ಭಟ್, ಸುಮಾ ಕುರಿಯನ್, ಸಿ. ಕೆ. ಮಣಿ ಮೊದಲಾದವರು ಕ್ಲಾಸ್ಮೇಟುಗಳು. ನ್ಯಾಷನಲ್ ಕಾಲೇಜು ಬಿಟ್ಟು ಮುಂದೆ ದಿನೇಶ್ ದೆಹಲಿಯ ಒಂದು ಕಾಲೇಜಿನಲ್ಲಿ ಒಂದು ವರ್ಷ ಅಧ್ಯಾಪಕರಾಗಿದ್ದು ಬಳಿಕ ಅಮೆರಿಕಾಕ್ಕೆ ಹೋಗಿ ಅಲ್ಲಿನ ಚಿಂಚಿನಾಟಿ ಯುನಿವರ್ಸಿಟಿಯಲ್ಲಿ ಶೇಕ್ ಸ್ಪಿಯರ್ ಮೇಲೆ ಪಿಎಚ್. ಡಿ. ಮಾಡಿ ಈಗ ಅಲ್ಲಿನ ಒಂದು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾರೆ.

ಈಗ ಅವರ ಬಗ್ಗೆ ಬರೆಯಲು ಮುಖ್ಯ ಕಾರಣ ಅವರು ಮಾಡಿರುವ ಪುರಂದರ ದಾಸರ ಪದ್ಯಗಳ ಅನುವಾದ. ಅಮೆರಿಕಾದ ಒಂದು ಸಣ್ಣ ಪ್ರಕಾಶನ ಸಂಸ್ಥೆ ಇದನ್ನು ಪ್ರಕಟಿಸಿದ್ದರೂ ಇವು ಹೆಚ್ಚು ವ್ಯಾಪಕವಾಗಿ ಗೊತ್ತಾಗಬೇಕಾದ ಅನುವಾದಗಳು. ರಾಮಾನುಜನ್ ಮಾಡಿದ ವಚನಗಳ ಅನುವಾದದಷ್ಟೇ ಚೆನ್ನಾಗಿರುವ ಅನುವಾದಗಳು. ಒಟ್ಟು 73 ಪದ್ಯಗಳನ್ನು ಈ ಪುಸ್ತಕದಲ್ಲಿ ದಿನೇಶ್ ಅನುವಾದಿಸಿ ಕೊಟ್ಟಿದ್ದಾರೆ. ಪುರಂದರ ದಾಸರ ಬಗ್ಗೆ ಒಂದು ಒಟ್ಟಂದದ ಚಿತ್ರ ಪಡೆಯಲು ಹೊರಗಿನವರಿಗೆ ಇದರಿಂದ ಸಾಧ್ಯವಾಗಿದೆ. ಅನುವಾದದ ಮುಖ್ಯ ಗುಣವೆಂದರೆ ಮೂಲದ ಸಾಲುಗಳ ಲಯವನ್ನು ಇಂಗ್ಲಿಷಿನಲ್ಲಿ ಹಿಡಿಯಲು ಅನುವಾದಕರಿಗೆ ಸಾಧ್ಯವಾದುದು. ಉದಾಹರಣೆಗೆ ಈ ಕೆಳಗಿನ ಅನುವಾದ ನೋಡಿ. ಇದು "ಹಾಲು ಮಾರಲು ಬಂದೆವಮ್ಮ"ದ ಅನುವಾದ:

We poor milkmaids are on our way
To sell milk in town.
O mother of that purple-skinned rascal.

You know well how long it takes
For us to get ready to go to the market.
We are up before sunrise.
We don our best saris and wear
Our precious gold bangles.
Then we dance our way to town
With milk jugs on our jasmine-adorned heads.
No easy trick, mind you.

A few minutes into the trek,
Who do we see but your naughty little boy?
He wraps an arm around our waists,
Grabs a hand;
Says he will unwrap our saris
If we don`t pay his tax.

How can we pay this stealer of kisses his tax?
Decked out in gold,
Diamonds, emeralds, sapphires, rubies,
He wants no money,
But a kiss and a girdle-loosening hug.
Make him listen to our entreaties,
O mother of that blue-skinned rascal.

You don`t want us to be beaten black and blue
By our jealous husbands.
We wish we knew how to avoid him.

"Come here, pretty girl, I want to tell you a rumor",
Says he.
Teach us how to resist the invitation.
The moment we near him,
His hands explore our hills and valleys.
Teach us how to break away from him.
Tell him to leave us alone.

No one will buy milk at noon.
And there is none left unspoiled
After we pay the tax demanded
By that blue-skinned little thief.
Please tell that little rascal,
Purandaravitthala, to leave us alone.

We poor milkmaids are on our way
To sell milk in town.

*****

Sunday, August 12, 2012

ಮುಂದಿನ ಪುಸ್ತಕ

ನನ್ನ ಮುಂದಿನ ಪುಸ್ತಕ ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ. ಇದು 1993ರಲ್ಲಿ ಮೊದಲು ಮುದ್ರಣವಾಗಿತ್ತು. ಪ್ರಕಟವಾದ ಆರು ತಿಂಗಳಲ್ಲಿ ಪ್ರತಿಗಳು ಮುಗಿದಿದ್ದವು. ಈಗ ಸುಮಾರು ಎರಡು ದಶಕಗಳ ನಂತರ ಪರಿಷ್ಕೃತ ಆವೃತ್ತಿ ಪ್ರಕಟವಾಗುತ್ತಿದೆ. ಇದರಲ್ಲಿ ನಾನು ಶೇಕ್ ಸ್ಪಿಯರ್ ಬಗ್ಗೆ ಇದು ವರೆಗೆ ಬರೆದ ಎಲ್ಲಾ ಬರೆಹಗಳು ಇವೆ. ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಮಾತ್ರವಲ್ಲದೆ ನಾಟಕಗಳು, ಸಾನೆಟ್ಟುಗಳು ಹಾಗೂ ಶೇಕ್ ಸ್ಪಿಯರ್ ಅಧ್ಯಯನ ಕುರಿತ ಲೇಖನಗಳಿವೆ. ಸುಮಾರು ಇನ್ನೂರು ಪುಟಗಳ ಈ ಪುಸ್ತಕ ಸೆಪ್ಟೆಂಬರ್ ಹೊತ್ತಿಗೆ ಬಿಡುಗಡೆಯಾಗುತ್ತದೆ.

ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಅನೇಕರಿಂದ ಮೆಚ್ಚುಗೆ ಪಡೆದ ಕೃತಿ. ಯು. ಆರ್. ಅನಂತಮೂರ್ತಿಯವರು "ನನಗೆ ತಿಳಿದಂತೆ ಈ ಬಗೆಯ ಕೃತಿ ಕನ್ನಡದಲ್ಲಾಗಲೀ ಇಂಗ್ಲಿಷಿನಲ್ಲಾಗಲೀ ಇದು ವರೆಗೆ ಪ್ರಕಟವಾಗಿಲ್ಲ. ಇದು ತೌಲನಿಕ ವಿಮರ್ಶೆಗೆ ನೀಡಿದ ಹೊಸ ಕೊಡುಗೆಯಾಗಿದೆ" ಎಂದು ಇದರ ಬಗ್ಗೆ ಬರೆದಿದ್ದರು. "ವಸಾಹತುಶಾಹಿ ಪ್ರಭಾವ, ಸೃಜನಶೀಲತೆ ಕುರಿತಂತೆ ಕನ್ನಡದ ಕೃತಿಗಳನ್ನು ಹಿಡಿದು, ವಿಶ್ಲೇಷಿಸಿ, ಸ್ಪಷ್ಟವಾದ ಒಳನೋಟಗಳಿಗೆ/ತೀರ್ಮಾನಗಳಿಗೆ ತಲುಪಿದ ಮೊದಲ ಕೃತಿಯೆಂದರೆ ಇವರ ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಎಂದು ನನ್ನ ಅನಿಸಿಕೆ. ವಸಾಹತುಶಾಹಿ ಪ್ರಭಾವ ನಮ್ಮ ಮನಸ್ಸಿನ ಆಳ ಅಗಲಗಳನ್ನು ಎಲ್ಲೆಲ್ಲಿ ಹೇಗೆ ಹೇಗೆ ಉಡ ಹಿಡಿಯಬಹುದು ಮತ್ತು ಅಂತಹ ಪ್ರಭಾವದಿಂದ ಹೊರಬರಲು ಇರುವ ಸೃಜನಶೀಲ ಉಪಾಯಗಳು ಯಾವುವು ಎಂಬುದರ ಸೂಕ್ಷ್ಮಗಳನ್ನು ತಿಳಿಯಲು ಡಾ. ದೇವ ಅವರ ಕೃತಿಯ ಓದು ಕಡ್ಡಾಯ" ಎಂದು ಕೆ. ಸತ್ಯನಾರಾಯಣ ಬರೆದಿದ್ದರು.

ಕಳೆದ ಹನ್ನೆರಡು ವರ್ಷಗಳಿಂದ ಹಳ್ಳಿಯಲ್ಲಿ ವಾಸಿಸುತ್ತಿರುವ ನಾನು ಅನೇಕ ಸಮಯದಿಂದ ಬರೆಯಬೇಕೆಂದಿದ್ದುದರ ಬಹುಭಾಗವನ್ನು ಈ ಅವಧಿಯಲ್ಲಿ ಬರೆದೆ. ಅವು ಮುಂದಿನ ಎರಡು ಮೂರು ವರ್ಷಗಳ ಅವಧಿಯಲ್ಲಿ ಇಪ್ಪತ್ತು ಸಂಪುಟಗಳಲ್ಲಿ ಪ್ರಕಟವಾಗಲಿವೆ. ಶೇಕ್ ಸ್ಪಿಯರ್ ಎರಡು ಸಂಸ್ಕೃತಿಗಳಲ್ಲಿ ಈ ಮಾಲಿಕೆಯ ಆರನೆಯ ಪುಸ್ತಕ. ಸಮಗ್ರ ನಾಟಕಗಳ ನಾಲ್ಕು ಸಂಪುಟಗಳು ಮತ್ತು ಸಮಗ್ರ ಕಥೆಗಳ ಒಂದು ಸಂಪುಟ ಈಗಾಗಲೇ ಪ್ರಕಟವಾಗಿವೆ. ಸಮಗ್ರ ಕಥೆಗಳ ಎರಡನೆಯ ಸಂಪುಟ, ಆತ್ಮಕಥನ ದೇವಲೋಕ ಪರಲೋಕ, ಅನುವಾದಗಳ ಮೂರು ಸಂಪುಟಗಳು, ಸಮಗ್ರ ಕಾವ್ಯದ ಮೊದಲ ಸಂಪುಟ, ಮತ್ತು ನಾಟಕಗಳ ಇಂಗ್ಲಿಷ್ ಅನುವಾದಗಳ ಸಂಪುಟಗಳು ಮುಂದಿನ ವರ್ಷ ಪ್ರಕಟವಾಗಲಿವೆ.

Sunday, July 29, 2012

ಈಗ ಪ್ರಕಟವಾಗಿದೆ

ಪ್ರತಿ ಬೇಕಾದವರು ನೇರ ನಮ್ಮಿಂದ ತರಿಸಿಕೊಳ್ಳಬಹುದು:
ಬೋಧಿ ಟ್ರಸ್ಟ್
ಕಲ್ಮಡ್ಕ 574212, ಕರ್ನಾಟಕ
bodhitrustk@gmail.com
ಬೆಲೆ ರೂ120.00
ಶೇಕಡಾ 25% ರಿಯಾಯಿತಿಯಿದೆ.

Sunday, July 8, 2012

ಸಮಗ್ರ ನಾಟಕಗಳು, ಸಂಪುಟ 1

ಇದು ಸದ್ಯದಲ್ಲ್ಲೇ ಪ್ರಕಟವಾಗಲಿರುವ ನನ್ನ ಹೊಸ ಪುಸ್ತಕ. 2006ನೇ ಇಸವಿಯಲ್ಲಿ ಇದು ಈ ಮೊದಲು ಪ್ರಕಟವಾಗಿದ್ದರೂ ಪ್ರತಿಗಳು ಮುಗಿದು ಪುಸ್ತಕ ಲಭ್ಯವಿರಲಿಲ್ಲ.  ಈ ಆವೃತ್ತಿಗಾಗಿ ಕೊಳಲು ಮತ್ತು ಶಂಖವನ್ನು ಆಮೂಲಾಗ್ರ ತಿದ್ದಿ ಬರೆದಿದ್ದೇನೆ. ಇದು ಕೃಷ್ಣಾವಸಾನ ಕುರಿತ ನಾಟಕ. ಇದರಲ್ಲಿರುವ ರಥಮುಸಲ 1982ರಲ್ಲಿ, ಕುದುರೆ ಬಂತು ಕುದುರೆ 1983ರಲ್ಲಿ ಮೊದಲು ಪ್ರಕಟ ಮತ್ತು ಪ್ರಯೋಗ ಆಗಿದ್ದವು.

ಸಮಗ್ರ ನಾಟಕಗಳ ಸಂಪುಟ 2, 3, ಮತ್ತು 4ರ ಪ್ರತಿಗಳು ಇವೆ. ಬೇಕಾದವರು ಬೋಧಿ ಟ್ರಸ್ಟ್ ನಿಂದ ಪಡೆಯಬಹುದು. ಇದರ ಪ್ರಕಾಶಕರು ಸಹಾ ಬೋಧಿ ಟ್ರಸ್ಟ್.  ನಾಲ್ಕೂ ಸಂಪುಟಗಳ ಒಟ್ಟು ಬೆಲೆ ರೂ330. 00. ನಮ್ಮ ಎಲ್ಲಾ ಪುಸ್ತಕಗಳ ಮೇಲೆ ಶೇಕಡಾ 25 ರಿಯಾಯಿತಿ ಇದೆ. ಅಂಚೆ ವೆಚ್ಚ ಉಚಿತ.

ಪುಸ್ತಕದ ಮುಖಪುಟದ ಫೊಟೋ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ನ ಉದ್ಯೋಗಿಗಳ ನಾಟಕ ತಂಡ ಸ್ನೇಹರಂಗ ಬೆಂಗಳೂರಿನಲ್ಲಿ ಸುಮಾರು ಒಂದೂವರೆ ವರ್ಷಗಳ ಕೆಳಗೆ ಆಡಿದ ಕುದುರೆ ಬಂತು ಕುದುರೆ  ನಾಟಕದ ಒಂದು ದೃಶ್ಯ ತೋರಿಸುತ್ತದೆ. ನಾಟಕದ ನಿರ್ದೇಶಕರು ಎನ್. ಮಂಗಲಾ. ಫೊಟೋ ತೆಗೆದವರು ಟಿ. ಆರ್. ಚಂದ್ರಶೇಖರ ಶೆಟ್ಟಿ. ಮುಖಪುಟ ವಿನ್ಯಾಸ ಜಾನ್ ಚಂದ್ರನ್ ಅವರದ್ದು.

ನನಗೆ ಈ ನಾಟಕದ ಪ್ರಯೋಗ ತುಂಬಾ ಇಷ್ಟವಾಗಿತ್ತು. ಬರೆದದ್ದು ಸಾರ್ಥಕವಾಯಿತು ಅನ್ನಿಸಿತು. ಸ್ನೇಹರಂಗದ ನಟರು ಸಹಾ ಪ್ರಭಾವಶಾಲಿಯಾಗಿ ಆಡಿದರು. ಮಂಗಲಾರ ನಿರ್ದೇಶನ ಸೃಜನಶೀಲವಾಗಿತ್ತು. ಇಷ್ಟರ ಮಟ್ಟಿಗೆ ಒಬ್ಬ ಸೃಜನಶೀಲ ನಿರ್ದೇಶಕಿಯ ಪ್ರತಿಭೆಯನ್ನು ವ್ಯಕ್ತಿಪಡಿಸಲು ನನ್ನ ನಾಟಕ ಕಾರಣವಾಗುತ್ತದೆ ಎಂದಾದರೆ, ಇಂಥಾ ನಾಟಕಗಳನ್ನು ಇನ್ನೂ ಬರೆಯಬೇಕು ಅನ್ನಿಸಿತು.

Monday, June 18, 2012

ಕುದುರೆ ಬಂತು ಕುದುರೆ ಫೊಟೋಗಳು

ಇವು ಎರಡು ವರ್ಷಗಳ ಕೆಳಗೆ ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನ ಕಾರ್ಮಿಕರ ನಾಟಕ ತಂಡ ಸ್ನೇಹರಂಗ ಆಡಿದ ನನ್ನ ನಾಟಕ ಕುದುರೆ ಬಂತು ಕುದುರೆಯ ದೃಶ್ಯಗಳು. ನಾಟಕ ನಿರ್ದೇಶಿಸಿದವರು ಎನ್. ಮಂಗಳಾ. ಫೊಟೋ ತೆಗೆದವರು ಟಿ. ಆರ್. ಚಂದ್ರಶೇಖರ ಶೆಟ್ಟಿ.

ನನಗೆ ಇದು ಇಷ್ಟವಾದ ಪ್ರಯೋಗ. ಆ ನಾಟಕದಲ್ಲಿ ಮೂರು ನಾಟಕಗಳಿವೆ. ಪ್ರೇಕ್ಷಕರ ಎದುರು ರಂಗದ ಮೇಲೆ ನಡೆಯುವ ನಾಟಕ ಒಂದು; ರಂಗದ ಹೊರಗೆ ಗುಡ್ಡದ ಮೇಲೆ ನಡೆಯುತ್ತಿರುವ ಶೂಟಿಂಗ್ ನಾಟಕ ಇನ್ನೊಂದು; ಪಾತ್ರಗಳ ಜೀವನದಲ್ಲಿ ಹಿಂದೆ ಆಗಿಹೋದ ಮತ್ತು ಮುಂದೆ ಆಗಬಹುದಾದ ನಾಟಕ ಮತ್ತೊಂದು. ಮಂಗಳಾರ ಪ್ರಯೋಗ ಆ ಮೂರು ನಾಟಕಗಳನ್ನು ಏಕತ್ರದಲ್ಲಿ ಸಂಧಿಸಿ ತೋರಿಸಿತ್ತು. ನನಗೆ ಆ ನಾಟಕ ನೋಡಿದ ಮೇಲೆ ಇಂಥಾ ಪ್ರತಿಭಾವಂತ ನಿರ್ದೇಶಕರು ನನ್ನ ನಾಟಕ ತೆಗೆದುಕೊಳ್ಳುತ್ತಾರೆ ಎಂದಾದರೆ ಇಂಥಾ ನಾಟಕ ಇನ್ನೂ ಬರೆಯಬೇಕು ಅನ್ನಿಸಿತು.

Saturday, June 16, 2012

ಹುಲಿಯ ಕಥೆ: ಮತ್ತೆ ಕೆಲವು ಫೊಟೋ



ಹುಲಿಯ ಕಥೆ: ಮತ್ತಷ್ಟು ಫೊಟೋಗಳು

ಫೊಟೋದಲ್ಲಿರುವವರು ಡಾ. ನ. ರತ್ನ (ಲೇಖಕ), ಹರಿಲಾಲ್ (ಕೆ. ವಿ. ಘನಶ್ಯಾಮ), ಗಾಂಧೀಜಿ (ಕೆ. ಎನ್. ವಾಸುದೇವಮೂರ್ತಿ), ಸೀತೆ (ಇಂದಿರಾ ನಾಯರ್), ತಾಪಸಿ (ಸರ್ವಮಂಗಳಾ), ಮಂಥರೆ (ರತ್ನ ವಿಶ್ವನಾಥ್), ರಾಮ (ಬಿ ಆರ್. ರವೀಶ್), ಲವ (ಸಹಮತ--ಇವರೇ ನಾಟಕದ ನಿರ್ದೇಶಕಿ; ಕೊನೆಯ ಫೊಟೋದಲ್ಲಿ ಬಲ ಬದಿ), ಕುಶ (ನಿಧಿ ಎಂ. ಆತ್ರೇಯ).

ಹುಲಿಯ ಕಥೆ ಫೊಟೋಗಳು

ಇದರಲ್ಲಿರುವವರು ಸಹಮತ ಬೊಳ್ವಾರ್ ಮತ್ತು ನಿಧಿ ಎಂ. ಆತ್ರೇಯ ಲವ ಹಾಗು ಕುಶರಾಗಿ; ಸೀತೆಯಾಗಿ ಇಂದಿರಾ ನಾಯರ್; ತಾಪಸಿಯಾಗಿ ಸರ್ವಮಂಗಳಾ; ರಾಮನಾಗಿ ಬಿ. ಆರ್. ರವೀಶ್.

Tuesday, June 12, 2012

ನಾಗರಾಜ ರಾವ್ ಜವಳಿ

ನಾಗರಾಜ ರಾವ್ ಜವಳಿ ನನ್ನ ಬ್ಲಾಗಿನ ಫೊಲೊಯರ್ ಆಗಿದ್ದವರು. ನನಗೆ ಅವರು ತೀರ್ಥಹಳ್ಳಿಯವರು, ಸಾಹಿತ್ಯ-ಸಂಸ್ಕೃತಿಗಳಲ್ಲಿ ಗಂಭೀರ ಆಸಕ್ತಿ ಉಳ್ಳವರು ಎಂದು ಮಾತ್ರ ಗೊತ್ತಿತ್ತು. ಆದರೆ ನಿನ್ನೆ ಅವರ ಅಕ್ಕ ಶ್ರೀಮತಿ ಸರಸ್ವತಿ ಪ್ರಭು ಮಾತಾಡುತ್ತಾ ಅವರು ಕಳೆದ ವರ್ಷ ನವೆಂಬರಿನಲ್ಲಿ ಹೃದಯಾಘಾತದಿಂದ ನಿಧನರಾದರೆಂದು ತಿಳಿಸಿದರು. ನಿನ್ನೆ ಸರಸ್ವತಿ ಪ್ರಭು ತಿಳಿಸಿದ ಮೇಲೇ ಅವರು ಅಕ್ಕ-ತಮ್ಮ ಎಂದೂ ನನಗೆ ಗೊತ್ತಾದದ್ದು. ಸರಸ್ವತಿ ಪ್ರಭು ನನ್ನ ನಾಟಕ ಕುದುರೆ ಬಂತು ಕುದುರೆಯನ್ನು ಹಿಂದಿಗೆ ಅನುವಾದಿಸಿದ್ದರು. ಹೀಗಾಗಿ ಅವರು ನನಗೆ ಹೆಚ್ಚು ಪರಿಚಯ. ಆ ಅನುವಾದ ಬಿ. ವಿ ಕಾರಂತರೂ ಸೇರಿದಂತೆ ಅನೇಕ ಹಿಂದಿ ಸಾಹಿತ್ಯ ಬಲ್ಲವರ ಮೆಚ್ಚುಗೆಗೆ ಪಾತ್ರವಾಗಿತ್ತು.

ತಡವಾಗಿಯಾದರೂ, ನಾಗರಾಜ ಜವಳಿ ಅವರಿಗೆ ಈ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ. ಆ ನೋವು ಸಹಿಸುವ ಶಕ್ತಿ ಅವರ ಅಕ್ಕ ಸರಸ್ವತಿ ಪ್ರಭು ಸೇರಿದಂತೆ ಅವರ ಕುಟುಂಬದ ಮತ್ತು ಅವರನ್ನು ಬಲ್ಲ ಎಲ್ಲರಿಗೆ ಸಿಕ್ಕಲಿ ಎಂದು ಬಯಸುತ್ತೇನೆ.

Monday, June 11, 2012

ಹುಲಿಯ ಕಥೆ

ಮೊನ್ನೆ ಜೂನ್ 9ರಂದು ಮೈಸೂರಿನ ಸಮತೆಂತೋ ತಂಡದವರು ನನ್ನ ನಾಟಕ ಹುಲಿಯ ಕಥೆ ಆಡಿದರು. ಇದು ಎರಡು ವರ್ಷಗಳ ಹಿಂದೆ ಪ್ರಕಟವಾದ ಈ ನಾಟಕದ ಮೊದಲ ಪ್ರಯೋಗ. ನಾನು ಇದನ್ನು ಸ್ನೇಹಿತರೊಬ್ಬರ ಹತ್ತಿರ world premier ಎಂದು ಕರೆದುಕೊಂಡೆ. ಅಮೇರಿಕಾದವರೋ ಇಂಗ್ಲೆಂಡಿನವರೋ ತಮ್ಮ ಊರಿನಲ್ಲಿ ನಾಟಕ ಆಡಿ ಅದನ್ನು world premier ಅಂದುಕೊಳ್ಳಬಹುದಾದರೆ ನಾವೇಕೆ ಅಂದುಕೊಳ್ಳಬಾರದು ಎಂದುದಕ್ಕೆ ಹೌದು ಎಂದು ಅವರೂ ನಗಾಡಿದರು.

ರಂಗಾಯಣದವರು ಮೈಸೂರಿನ ನಾಟಕ ತಂಡಗಳ ಒಂದು ಉತ್ಸವ ಏರ್ಪಡಿಸಿದ್ದರು. ಅಲ್ಲಿ ಆಡಿದ ನಾಟಕ ಇದು. House full ಆದ್ದು ಮಾತ್ರವಲ್ಲದೆ ನಾಟಕ ಮುಗಿದ ಮೇಲೆ ಪ್ರೇಕ್ಷಕರು ಉತ್ಸಾಹದ ಪ್ರತಿಕ್ರಿಯೆ ತೋರಿಸಿದರು.

ಸಮತೆಂತೋ ನನಗೆ ಆಧುನಿಕ ರಂಗಭೂಮಿಯನ್ನು ಮೊದಲು ಪರಿಚಯಿಸಿದ ಸಂಸ್ಥೆ. ಹಳ್ಳಿಯಿಂದ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ 1966ರಲ್ಲಿ ಓದಲು ಹೋದ ನನಗೆ ಸಮತೆಂತೋ ಆಡಿದ ಪೂರ್ಣಚಂದ್ರ ತೇಜಸ್ವಿಯವರ ಯಮಳ ಪ್ರಶ್ನೆ, ಡಾ. ರತ್ನರ ಎಲ್ಲಿಗೆ?, ಚೆಕಾವ್ ನ ಕಾಡ್ಮನ್ಸ ಮೊದಲಾದವು ನೋಡಲು ಸಿಕ್ಕಿದ್ದು ಅದೃಷ್ಟ. ಎಲ್ಲಿಗೆ? ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ನಾಟಕ. ಅದರಲ್ಲಿ ಎಚ್. ಎಂ. ಚೆನ್ನಯ್ಯ ಶಿರಡಿ ಸಾಯಿಬಾಬಾನ ಹಾಗೆ ಕೂತುಕೊಳ್ಳುವುದು ಮತ್ತು ಆ ಗೆಶ್ಚರಿನ ಧ್ವನಿಶಕ್ತಿ ಸಾಯಿಬಾಬಾನ ಭಕ್ತರ ಊರಿನಿಂದ ಹೋಗಿದ್ದ ನನಗೆ ತುಂಬಾ ಇಷ್ಟವಾದವು. ಮುಂದೆ 1973ರಲ್ಲಿ ಸಮತೆಂತೋದವರ ಕದಡಿದ ನೀರು ನಾಟಕದಲ್ಲಿ ನಾನು ಶಂಕರನ ಪಾತ್ರ ಮಾಡಿದ್ದೆ. ಆ ಮೇಲೆ ಮೈಸೂರು ಬಿಟ್ಟದ್ದರಿಂದ ಅವರ ನಾಟಕಗಳಲ್ಲಿ ಅಭಿನಯಿಸುವ ಅವಕಾಶ ಹೊರಟುಹೋಯಿತು.

ಆಗ ಕದಡಿದ ನೀರುನಲ್ಲಿ ಮಲ್ಲಿ ಪಾತ್ರ ಮಾಡಿದ ಇಂದಿರಾ ನಾಯರ್ ಹುಲಿಯ ಕಥೆಯಲ್ಲಿ ಸೀತೆಯ ಪಾತ್ರ ಮಾಡಿದ್ದರು. ಮೂವತ್ತೈದು ವರ್ಷಗಳ ಬಳಿಕ ಈಗ ಮತ್ತೆ ಪಾತ್ರ ಮಾಡುತ್ತಿದ್ದಾರೆ. ತುಂಬಾ ಒಳ್ಳೆಯ ನಟಿಯಾದ ಅವರನ್ನು ಮತ್ತೆ ಭೇಟಿಯಾದದ್ದೇ ನನಗೆ ಸಂತೋಷದ ವಿಷಯವಾಗಿತ್ತು. ಇನ್ನೊಬ್ಬರು ನಟಿ ಸರ್ವಮಂಗಳಾ. ಅವರೂ ಅಭಿನಯಿಸದೆ ಅನೇಕ ವರ್ಷಗಳಾದವಂತೆ. ಡಾ. ರತ್ನ, ಅವರ ಮನೆಯವರು, ಹಳೆಯ ಸ್ನೇಹಿತ ರಘುನಾಥ್ ಮತ್ತು ಅವರ ಮನೆಯವರು, ಬಸವರಾಜ್--ಈ ಹಳೆಯ ಸ್ನೇಹಿತರನ್ನೆಲ್ಲಾ ಮತ್ತೆ ಭೇಟಿಯಾದದ್ದು ನನಗೆ ನನ್ನ ನಾಟಕ ಆಡಿದ್ದನ್ನು ನೋಡಿದಷ್ಟೇ ಖುಷಿ ಕೊಟ್ಟಿತು.

ಇದನ್ನು ನಿರ್ದೇಶಿಸಿದವರು ಸಹಮತ್. ಅತ್ಯಂತ ಚಿಕ್ಕ ವಯಸ್ಸಿನ ನಿರ್ದೇಶಕಿ. ಆದರೆ ಅವರ ಆತ್ಮವಿಶ್ವಾಸ ದೊಡ್ಡದನ್ನು ಸಾಧಿಸುವವರಲ್ಲಿ ಇರಲೇಬೇಕಾದ ಆತ್ಮವಿಶ್ವಾಸ. 

ಪ್ರಯೋಗದಲ್ಲಿ ಅನೇಕ ಕೊರತೆಗಳಿವೆ. ಆದರೆ ಇದು ಮೊದಲ ಪ್ರಯೋಗ. ಅವೆಲ್ಲಾ ಮುಂದೆ ಸರಿಯಾಗುವಂಥದು.